ನವೆಂಬರ್ ಅಂತ್ಯಕ್ಕೆ ಬಾರೀ ಚಂಡಮಾರುತ? ಪೂರ್ವ ಕರಾವಳಿಗೆ 'ಹೈ ಅಲರ್ಟ್'
ಮಲಕ್ಕಾ ಜಲಸಂಧಿ ಮತ್ತು ಅಕ್ಕಪಕ್ಕದ ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ ಸುಳಿಗಾಳಿ ಸೈಲೋನಿಕ್ ಪರಿಚಲನೆಯೊಂದು ಉಂಟಾಗಿದ್ದು, ಇದು ವಾಯುಮಂಡಲದ, ಮಧ್ಯ ಟ್ರೋಪೋಸ್ಪಿಯರ್ ಮಟ್ಟದವರೆಗೆ ವಿಸ್ತರಿಸಿದೆ. ಇದು ಪಶ್ಚಿಮದ ಕಡೆಗೆ ಚಲಿಸುವ ಸಾಧ್ಯತೆಯಿದ್ದು, ಇದರ ಪ್ರಭಾವದಿಂದ ಮುಂದಿನ 24 ಗಂಟೆಗಳಲ್ಲಿ ಆಗ್ನೇಯ ಬಂಗಾಳ ಕೊಲ್ಲಿ ಮತ್ತು ಅಂಡಮಾನ್ ಸಮುದ್ರದ ವ್ಯಾಪ್ತಿಯಲ್ಲಿ 'ಕಡಿಮೆ ಒತ್ತಡದ ಪ್ರದೇಶ' ಉಂಟಾಗುವ ನಿರೀಕ್ಷೆಯಿದೆ. ಈ ಹವಾಮಾನ ವ್ಯವಸ್ಥೆಯು ಮುಂದಿನ ವಾರದ ಆರಂಭದಲ್ಲಿ ಬಲಗೊಂಡು ದೊಡ್ಡ ಮಟ್ಟದ ಚಂಡಮಾರುತವಾಗಿ ಬದಲಾಗುವ ಲಕ್ಷಣಗಳು ಗೋಚರಿಸುತ್ತಿವೆ. ಈ ಸಮಯದಲ್ಲಿ ಸಮುದ್ರದಲ್ಲಿ ಉಂಟಾಗುವ ಪ್ರಕ್ಷುಬ್ಧತೆಗಳು ಸಾಮಾನ್ಯವಾಗಿ ತೀವ್ರ ಸ್ವರೂಪದ ಚಂಡಮಾರುತಗಳಾಗಿ ಬೆಳೆಯುವ ಸಾಧ್ಯತೆಗಳೇ ಹೆಚ್ಚು.
ನವೆಂಬರ್ ತಿಂಗಳಲ್ಲಿ ಬಂಗಾಳ ಕೊಲ್ಲಿಯಲ್ಲಿ ಉಂಟಾಗುವ ಬಹುತೇಕ ಚಂಡಮಾರುತಗಳ ಮೂಲ 8°N ಮತ್ತು 13°N ಅಕ್ಷಾಂಶಗಳ ನಡುವೆ ಇರುತ್ತದೆ. ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸುವ ಚಂಡಮಾರುತಗಳು ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರ ಕರಾವಳಿಗೆ ಅಪ್ಪಳಿಸಿ, ಅರಬ್ಬಿ ಸಮುದ್ರವನ್ನು ಪ್ರವೇಶಿಸಿ ಅಲ್ಲಿ ಮತ್ತೆ ಚುರುಕುಗೊಳ್ಳುತ್ತವೆ. ಕಳೆದ ವರ್ಷ ನವೆಂಬರ್ನಲ್ಲಿ 'ಫೆಂಗಲ್' (Fengal) ಚಂಡಮಾರುತ ಇದೇ ಹಾದಿಯನ್ನು ಅನುಸರಿಸಿ ಕಾರೈಕಲ್ ಬಳಿ ಅಪ್ಪಳಿಸಿತ್ತು. ಇನ್ನು ಉತ್ತರ ಅಕ್ಷಾಂಶಗಳಲ್ಲಿ ಉಂಟಾಗುವ ಚಂಡಮಾರುತಗಳು ವಾಯುವ್ಯಕ್ಕೆ ಚಲಿಸಿ ನಂತರ ಈಶಾನ್ಯಕ್ಕೆ ತಿರುಗುತ್ತವೆ. 2023ರ ನವೆಂಬರ್ನಲ್ಲಿ 'ಮಿಧಿಲಿ' (Midhili) ಚಂಡಮಾರುತ ಇದೇ ರೀತಿ ಬಾಂಗ್ಲಾದೇಶದ ಮಧ್ಯಭಾಗಕ್ಕೆ ಅಪ್ಪಳಿಸಿತ್ತು.
ನಿರೀಕ್ಷಿತ 'ಕಡಿಮೆ ಒತ್ತಡದ ಪ್ರದೇಶವು' ಆಗ್ನೇಯ ಬಂಗಾಳ ಕೊಲ್ಲಿಯ ಕೆಳಭಾಗದಲ್ಲಿ ರೂಪುಗೊಳ್ಳುತ್ತಿದ್ದು, ಅಕ್ಷಾಂಶಗಳಲ್ಲಿ ಮೇಲೇರಿ ನವೆಂಬರ್ 25, 2025ರ ವೇಳೆಗೆ ದಕ್ಷಿಣ-ಮಧ್ಯ ಬಂಗಾಳ ಕೊಲ್ಲಿಯತ್ತ ಚಲಿಸುವ ನಿರೀಕ್ಷೆಯಿದೆ. ನಂತರ ಚಂಡಮಾರುತದ ಹಾದಿ ಅಸ್ಪಷ್ಟವಾಗಲಿದ್ದು, ಅದು ಪೂರ್ವ ಕರಾವಳಿಗೆ ಅಪ್ಪಳಿಸಬಹುದು ಅಥವಾ ಕರಾವಳಿಯಂಚಿನಲ್ಲಿ ಚಲಿಸಿ ಪಶ್ಚಿಮ ಬಂಗಾಳ/ಬಾಂಗ್ಲಾದೇಶದತ್ತ ಸಾಗಬಹುದು. ಇದೆಲ್ಲವೂ ಸಮುದ್ರ ಮಟ್ಟದಿಂದ 25,000 ಅಡಿ ಎತ್ತರದಲ್ಲಿರುವ ಗಾಳಿಯ ಚಲನೆ ಮೇಲೆ ಅವಲಂಬಿತವಾಗಿರುತ್ತದೆ. ಚಂಡಮಾರುತದ ಸಮಯ, ಹಾದಿ ಮತ್ತು ತಿರುವಿನ ವಿಚಾರದಲ್ಲಿ 'ಉಪಉಷ್ಣವಲಯದ ಹೆಚ್ಚಿನ ಒತ್ತಡದ ಪಟ್ಟಿಯ' ಸ್ಥಾನವು ನಿರ್ಣಾಯಕ ಪಾತ್ರ ವಹಿಸುತ್ತದೆ. ನವೆಂಬರ್ 24, 2025ರ ಸುಮಾರಿಗೆ ಈ ವ್ಯವಸ್ಥೆಯು ಕನಿಷ್ಠ 'ವಾಯುಭಾರ ಕುಸಿತ'ವಾಗಿ ಮಾರ್ಪಟ್ಟಾಗ ಹೆಚ್ಚಿನ ಸ್ಪಷ್ಟತೆ ಸಿಗಲಿದೆ.
ಬಂಗಾಳ ಕೊಲ್ಲಿಯಲ್ಲಿ ಈ ಋತುವಿನ ಎರಡನೇ ಚಂಡಮಾರುತದ ಸಾಧ್ಯತೆ ಇರುವುದರಿಂದ, ತಮಿಳುನಾಡಿನಿಂದ ಪಶ್ಚಿಮ ಬಂಗಾಳದವರೆಗಿನ ಪೂರ್ವ ಕರಾವಳಿಯಲ್ಲಿ ಅಪಾಯದ ಎಚ್ಚರಿಕೆ ನೀಡಲಾಗಿದೆ. ಚಂಡಮಾರುತವು ಸಮುದ್ರದಲ್ಲಿ ದೀರ್ಘಕಾಲ ಸಂಚರಿಸಲಿರುವುದರಿಂದ ಮತ್ತು ಸಾಗರ ಹಾಗೂ ವಾತಾವರಣದ ಸ್ಥಿತಿ ಅದಕ್ಕೆ ಪೂರಕವಾಗಿರುವುದರಿಂದ, ಇದು ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಹೆಚ್ಚು. ಇಡೀ ಕರಾವಳಿ ತೀರದಲ್ಲಿ ಕಟ್ಟೆಚ್ಚರ ವಹಿಸಬೇಕು ಮತ್ತು ತುರ್ತು ಸೂಚನೆ ಬಂದ ತಕ್ಷಣ ಕ್ರಮಕೈಗೊಳ್ಳಲು ಸನ್ನದ್ಧವಾಗಿರಬೇಕು.








